Skip to main content

ಅಂಬೇಡ್ಕರ್ ಮಕ್ಕಳು ಅದ್ಯಾವ ಮಟ್ಟಿಗೆ ಓದುತ್ತಿದ್ದಾರೆ?

 


-ರಘೋತ್ತಮ ಹೊ.ಬ

ಮೊನ್ನೆ ಒಂದಷ್ಟು ಯುವಕರು ಸಿಕ್ಕಿದ್ದರು. "ಜೈಭೀಮ್ಸರ್" ಎಂದ ಎಲ್ಲರೂ "ಏನ್ ಮಾಡ್ತಿದೀರಪ್ಪ, ಏನ್ ಓದಿದೀರಪ್ಪ" ಅಂದಾಗ "ಎಸ್ ಎಸ್ ಎಲ್ ಸಿ  ಸರ್" ಅಂದರು. ಮುಂದೆ ಓದ್ನಿಲ್ವ? ಅಂದಾಗ ಒಬ್ಬ ಮಾತ್ರ "ಪಿಯುಸಿ ಸರ್" ಅನ್ನುತ್ತ ಉಳಿದವರೆಲ್ಲ ಮುಖ ಕೆಳಗು ಮಾಡಿದರು. ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಇಂದಿನ ಶಿಕ್ಷಣದ ಮಟ್ಟವಿದು. ಒಂದೆಡೆ ಶೋಷಕ ವ್ಯವಸ್ಥೆ ಇವರು ಶಿಕ್ಷಣ ಪಡೆಯಬಾರದು ಎಂಬಂತೆ ನೀತಿ ರೂಪಿಸುತ್ತಿದ್ದರೆ ಮತ್ತೊಂದೆಡೆ ಇವರು ತಾವು ಓದಬೇಕು, ಮುಂದೆ ಬರಬೇಕು ಎಂಬ ಕನಿಷ್ಠ ಗ್ಯಾನ ಕೂಡ ಮಾಡದೆ ಹತ್ತನೇ ತರಗತಿ ಹಂತಕ್ಕೆ ಶಿಕ್ಷಣ ನಿಲ್ಲಿಸುತ್ತಿದ್ದಾರೆ. ಹಾಗೆ ಅಲ್ಲಿಂದಲೇ ಪ್ರಾರಂಭ ಕುಡಿತ, ಜೂಜು, ರೌಡಿಸಂ ನಂತಹ ಕಾನೂನುಬಾಹಿರ ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿ ನಡವಳಿಕೆಗಳು.

ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರರು ಎಷ್ಟು ಓದಿದ್ದರು? ಬಹುಶಃ ಇತಿಹಾಸ ಅದನ್ನು ಈಗಲೂ ಒಂದು ದಾಖಲೆ ಎಂದೇ ಪರಿಗಣಿಸಬೇಕಾಗುತ್ತದೆ ಆ ಮಟ್ಟಿಗೆ ಡಾ.ಅಂಬೇಡ್ಕರರು ಓದಿದರು. ದೂರದ ಅಮೆರಿಕದಲ್ಲಿ ಎಂ.ಎ, ಪಿಹೆಚ್ಡಿ, ಲಂಡನ್ ನಲ್ಲಿ ಎಂ.ಎಸ್ಸಿ, ಡಿಎಸ್ಸಿ, ಬಾರ್ - ಅಟ್- ಲಾ, ಜರ್ಮನಿಯಲ್ಲೂ ತುಸು ಸಮಯ ವ್ಯಾಸಂಗ... ಅರೆ, ನಮ್ಮ ಹುಡುಗರು ಎಸ್ ಎಸ್ ಎಲ್ ಸಿ ಗೆ ನಿಂತು ಹೋಗುತ್ತಿದ್ದಾರೆ! ಇದ್ಯಾಕೆ ಅಂತ? ಅದರಲ್ಲೂ ಅವರ ಮೊಬೈಲ್ ಗಳಲ್ಲಿ ಜೈಭೀಮ್, ಬುದ್ಧ, ಅಂಬೇಡ್ಕರರ ವಾಲ್ ಪೇಪರ್ ಗಳು, ಫೇಸ್ ಬುಕ್ ವ್ಯಾಟ್ಸಪ್ ಗಳಲ್ಲೂ ಅಂಬೇಡ್ಕರರ ಪ್ರೊಫೈಲ್ ಫೋಟೊಗಳು. ಆದರೆ ಎಷ್ಟು ಓದಿದಿಯಾ ಎಂದು ಕೇಳಿದಾಗ ಎಸ್ ಎಸ್ ಎಲ್ ಸಿ ಎಂಬ ಕಂಠಪಾಠ.

ದುರಂತದ ಸ್ಥಿತಿ ಇದು. ಯಾವ ಬಾಬಾಸಾಹೇಬ್ ಅಂಬೇಡ್ಕರರು ತನ್ನ ಜನ ಶಿಕ್ಷಣದಲ್ಲಿ ಮುಂದೆ ಬರಲಿ ಎಂದು ಶೈಕ್ಷಣಿಕ ಮೀಸಲಾತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ ಇತ್ಯಾದಿ ಕೊಡಿಸಿದರೊ ಅವರಮ ಕ್ಕಳು ಇಂದು ರೌಡಿಗಳು, ಕಡಿಮೆ ದುಡಿಮೆಯ ಕೂಲಿಗಳು, ಕುಡಿದು ತೂರಾಡಿ ಬೀಳುವ ಸಮಾಜಘಾತುಕರಾಗುತ್ತಿದ್ದಾರೆ. ಸ್ವಲ್ಪವೂ ಜವಾಬ್ದಾರಿ ಇಲ್ಲದ ಮುಂದಿನ ಕರಾಳ ಭವಿಷ್ಯದ ಅರಿವಿಲ್ಲದ ಬೇಜವಾಬ್ದಾರಿ ಪ್ರಜೆಗಳಾಗುತ್ತಿದ್ದಾರೆ. 

ವಾಸ್ತವ ಎಂದರೆ ದೌರ್ಜನ್ಯ ಮಾಡಲು ಸದಾ ತಯಾರಾಗಿ ನಿಂತಿರುವ ಆಳುವ ಮನುವಾದಿ ಜನಾಂಗಗಳು ಇವರಿಗಾಗಿ ಚಿತ್ರ ವಿಚಿತ್ರ ಕಾನೂನು ಮಾಡುತ್ತ ತಯಾರಾಗಿ ನಿಂತಿವೆ. ನಮ್ಮಂತಹವರು "ಅಯ್ಯೋ, ಇದರ ಬಗ್ಗೆ ನಾವು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದೇವಲ್ಲ" ಎಂದು ಬೆಂದು ಬಸವಳಿಯುತ್ತಿದ್ದೇವೆ. ಆದರೆ ನಮ್ಮ ವಿದ್ಯಾರ್ಥಿಗಳಿಗೆ ಯುವಕರಿಗೆ ಯುವತಿಯರಿಗೆ ಇದ್ಯಾವುದು ಅರಿವಾಗುತ್ತಿಲ್ಲ. ಬಹುಶಃ ನಮ್ಮಂತಹ ಪ್ರಜ್ಞಾವಂತಿಕೆಯ ಜನ ಈ ಯೋಚನೆಯೇ ತಪ್ಪೇನೊ ಎಂಬಂತೆ ಇವರ ಗಾಢ ನಿದ್ರೆ, ಉದಾಸೀನ ನಡೆ ಇದೆ. ಯಾಕೆಂದರೆ ಇಂದು ಯಾವುದೇ ಅಂಬೇಡ್ಕರ್ ಬಡಾವಣೆ, ಜಗಜೀವನ್ ರಾಮ್ ಬೀದಿ, ಪೌರಕಾರ್ಮಿಕರ ಕಾಲೋನಿಯಲ್ಲಿ ಯಾರೇ ಹೋಗಿ ನೋಡಿ ಶಿಕ್ಷಣ ಅಲ್ಲಿ ಬೆಳೆಯಲಾರದೆ ನರಳುತ್ತಿದೆ. ಪೋಷಕರ ಅಜ್ಞಾನ, ಅನಾದರ, ಮಕ್ಕಳ ಕಾಳಜಿ ಇಲ್ಲದಿರುವ ಮನಸ್ಸು ಒಂದೆಡೆ... ಯುವಕರ ಯುವತಿಯರ ಶಿಕ್ಷಣದ ಬಗೆಗಿನ ಬೇಜವಾಬ್ದಾರಿತನ ಇನ್ನೊಂದೆಡೆ. ಈ ನಡುವೆ ಇವರ ಶಿಕ್ಷಣ ಹೀಗೆ ಹಾಳಾಗಬೇಕು ಎಂದು ಬಯಸುವ ಮನುವಾದಿ ಸಮಾಜಕ್ಕೆ ಇವರ ಈ ನಡೆ ಹಾಲು ಅನ್ನ ಉಂಡಂತಾಗುತ್ತಿದೆ!

ಶತ ಶತಮಾನಗಳಿಂದ ಅಕ್ಷರ ಕಲಿಯಬೇಡಿ ಎಂದು ದೂರ ತಳ್ಳಲ್ಪಟ್ಟ ಜನರಿಗೆ ಅಕ್ಷರದ ಅವಕಾಶ ಕೊಡಿಸಲು ಬಾಬಾಸಾಹೇಬ್ ಅಂಬೇಡ್ಕರರು ಪಟ್ಟ ಶ್ರಮ, ಅವರ ಓದಿನ ಬದುಕೇ ಇದಕ್ಕೆ ಒಂದು ಉದಾಹರಣೆ. ಆದ್ದರಿಂದ ಈಗಲೂ ತಡವಾಗಿಲ್ಲ ಶೋಷಿತ ಸಮುದಾಯಗಳ ಯುವಕರು/ ಯುವತಿಯರು/ ವಿದ್ಯಾರ್ಥಿಗಳು

ಕನಿಷ್ಠ ಪಕ್ಷ ಪದವಿ ಮಟ್ಟಕ್ಕೆ ಓದುತ್ತೇವೆ ಎಂಬ ಪರಿಜ್ಞಾನ ಬೆಳೆಸಿಕೊಳ್ಳಬೇಕು. ಮದ್ಯಪಾನ, ರೌಡಿಸಂ, ಅರ್ಧಕ್ಕೆ ಕಾಲೇಜು ಬಿಡುವ ವ್ಯಸನದಿಂದ ಮುಕ್ತರಾಗಿ ಶಿಕ್ಷಣವೆಂಬ ಹುಲಿಯ ಹಾಲ ಕುಡಿಯಬೇಕು. ಅನ್ನ ಇಲ್ಲದಿದ್ದರೂ ಜ್ಞಾನ ನಮ್ಮ ಮನೆಯಲ್ಲಿ ಬಿದ್ದು ಒದ್ದಾಡುತ್ತಿದೆ ಎಂದು ನೋಡಿಕೊಳ್ಳಬೇಕು. ಆಗಷ್ಟೇ ಶತಶತಮಾನದ ನಮ್ಮ ನೋವು ಶಮನವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶೋಷಿತ ಸಮುದಾಯಗಳ ಯುವಕರು ಯುವತಿಯರು ಇತ್ತ ಗಮನಹರಿಸಲಿ, ತಮ್ಮ ಮನೆಗಳಲ್ಲಿ ಶಿಕ್ಷಣದ ಜ್ಯೋತಿ ಆರದಂತೆ ನೋಡಿಕೊಳ್ಳಲಿ.

***

#ದಲಿತರು #ಶಿಕ್ಷಣ

Comments

Popular posts from this blog

ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು

  ಹಿಂದೂ ಮತ್ತು ಅಸ್ಪೃಶ್ಯನೊಬ್ಬ ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಭೇಟಿಯಾದಾಗ... "ಯಾವಾಗಲಾದರೊಮ್ಮೆ ಅಕ್ಕಪಕ್ಕ ಕುಳಿತು ಪ್ರಯಾಣ ಮಾಡುವ ಸಂದರ್ಭದಲ್ಲಿ ಪರಸ್ಪರ ಜಾತಿ ತಿಳಿಯದಿದ್ದಾಗ ಜಾತಿವಾದಿ ಹಿಂದೂಗಳು ಮತ್ತು ಅಸ್ಪೃಶ್ಯರು ತುಂಬಾ ಆಪ್ತ ಸ್ನೇಹಿತರಂತೆ ವರ್ತಿಸುತ್ತಾರೆ. ಪರಸ್ಪರ ಬೀಡಿ, ಸಿಗರೆಟ್, ಹಣ್ಣುಗಳು, ಎಲೆ- ಅಡಿಕೆ ಹೀಗೆ ಅವರು ಹಂಚಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಆ ಹಿಂದೂ ವ್ಯಕ್ತಿಗೆ ತಾನು ಇಷ್ಟು ಹೊತ್ತು ಮಾತನಾಡುತ್ತಿದ್ದ ವ್ಯಕ್ತಿ ಅಸ್ಪೃಶ್ಯ ಎಂದು ತಿಳಿಯುತ್ತಿದ್ದಂತೆ ಆತನ ಮನಸ್ಸಿನಲ್ಲಿ ದ್ವೇಷದ ಮನೋಭಾವ ಮೊಳಕೆಯೊಡೆಯುತ್ತದೆ, ತಾನು ಮೋಸಗೊಳಗಾದೆನೆಲ್ಲ ಎಂದು ಆತ ಯೋಚಿಸಲು ಆರಂಭಿಸುತ್ತಾನೆ. ಆತ ಕೋಪಗೊಳ್ಳುತ್ತಾನೆ. ಅಂತಿಮವಾಗಿ ತಾತ್ಕಾಲಿಕ ಆ ಸ್ನೇಹ ಜಗಳ ಮತ್ತು ಬೈಗುಳದ ಮೂಲಕ ಅಂತ್ಯಗೊಳ್ಳುತ್ತದೆ". -ಡಾ.ಬಿ.ಆರ್.ಅಂಬೇಡ್ಕರ್ ( Ambedkar writings and speeches, Vol.17, Part 3, Pp.132) ಕನ್ನಡಕ್ಕೆ: ರಘೋತ್ತಮ ಹೊಬ)

ಮುಂದೊಂದು ದಿನ ಎಲ್ಲರೂ ಬೌದ್ಧರಾಗಲಿದ್ದಾರೆ -ಡಾ.ಅಂಬೇಡ್ಕರ್

  "ಪ್ರತಿಯೊಂದು ಧರ್ಮವು ಉತ್ತರಿಸಬೇಕಾದ ಒಂದು ಪ್ರಶ್ನೆ ಇದೆ. ಅದೆಂದರೆ ತಳ ಸಮುದಾಯ ಮತ್ತು ದೌರ್ಜನ್ಯ ಪೀಡಿತ ಸಮುದಾಯಗಳಿಗೆ ಧರ್ಮವೊಂದು ನೀಡಬಹುದಾದ ನೈತಿಕ ಮತ್ತು ಬೌದ್ಧಿಕ ಬೆಂಬಲವಾದರು ಏನು ಎಂಬುದು? ಧರ್ಮವೊಂದು ಅಂತಹದ್ದೊಂದು ಬೆಂಬಲ ನೀಡಲಿಲ್ಲ ಎಂದರೆ ಅದು ದುರದೃಷ್ಟಕರ ಪರಿಸ್ಥಿತಿಯಲ್ಲಿ ಇದೆ ಎಂದೆ ಅರ್ಥ. ಆದ್ದರಿಂದ  ಹಿಂದೂ ಧರ್ಮವು  ಕೋಟ್ಯಾಂತರ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರಿಗೆ ನೈತಿಕ ಮತ್ತು ಬೌದ್ಧಿಕ ಬೆಂಬಲ ನೀಡುತ್ತದೆಯೇ? ಖಂಡಿತ ಇಲ್ಲ. ಈ ನಿಟ್ಟಿನಲ್ಲಿ ತಮಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡದ ಹಿಂದೂ ಧರ್ಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಜನರು ಇರಲು ಬಯಸುತ್ತಾರೆ ಎಂದು ಹಿಂದೂಗಳು ಅಪೇಕ್ಷೆ ಪಡಲು ಸಾಧ್ಯವೇ? ಅಂದಹಾಗೆ ಅಂತಹದ್ದೊಂದು ಅಪೇಕ್ಷೆ ಅಕ್ಷರಶಃ ವ್ಯರ್ಥದ್ದು.  "ಯಾಕೆಂದರೆ ಹಿಂದೂ ಧರ್ಮ ಅದು ಜ್ವಾಲಾಮುಖಿಯ ಮೇಲೆ ತೇಲುತ್ತಿದೆ. ಆ ನಿಟ್ಟಿನಲ್ಲಿ ಇಂದು ಅದು(ಜ್ವಾಲಾಮುಖಿ) ನಂದಿದ ಹಾಗೆ ಕಾಣುತ್ತಿದೆ. ಆದರೆ ವಾಸ್ತವ ಅದಲ್ಲ‌‌. ಮೊಂದೊಂದು ದಿನ ಈ ಕೋಟ್ಯಂತರ (ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ) ಮಂದಿಗೆ ತಮ್ಮ ಈ ಹೀನ ಸ್ಥಿತಿಯ ಬಗ್ಗೆ ಅರಿವಾದಾಗ ಮತ್ತು ಅದಕ್ಕೆ ಹಿಂದೂ ಧರ್ಮದ ಸಾಮಾಜಿಕ ತತ್ವ ಕಾರಣ ಎಂದು ತಿಳಿದಾಗ ಆ ಜ್ವಾಲಾಮುಖಿ ಜೀವಂತಗೊಳ್ಳಲಿದೆ. ಇದಕ್ಕೆ ಸಾಕ್ಷಿಯಾಗಿ ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್: ಮರೆಯಬಾರದ ಮೈಸೂರು ದೊರೆ

  ನಾಲ್ವಡಿ ಕೃಷ್ಣರಾಜ ಒಡೆಯರ್ -ರಘೋತ್ತಮ ಹೊಬ "ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು" ಇದು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ಸುಪ್ರಸಿದ್ದ ನಾಣ್ಣುಡಿ. ಅದರಲ್ಲೂ ಹಳೆ ಮೈಸೂರು ಭಾಗದವರು ತಮ್ಮ ಭವ್ಯ ಇತಿಹಾಸವನ್ನು ಮರೆಯಲೇಬಾರದು. ಏಕೆಂದರೆ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆ ಮೈಸೂರು ಭಾಗ ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿದೆ ಎಂದರೆ ಅದಕ್ಕೆ ಕಾರಣ ಅದರ ಭವ್ಯ ಇತಿಹಾಸ. ಇಂತಹ ಭವ್ಯ ಇತಿಹಾಸದ ನಿರ್ಮಾತೃವಾಗಿ ತನ್ಮೂಲಕ ಮಾದರಿ ಮೈಸೂರಿಗೆ ಮುನ್ನುಡಿ ಬರೆದ ಧೃವತಾರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಆಳರಸರಿಗೆ ಮಾದರಿಯಾದ ರಾಜಯೋಗಿ.  ನಾಲ್ವಡಿಯವರು ಜನಿಸಿದ್ದು 1884 ರ ಜೂನ್ 4ರಂದು. ತಂದೆ ಶ್ರೀ ಚಾಮರಾಜ ಒಡೆಯರ್, ತಾಯಿ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ). ಬಾಲಕ ಕೃಷ್ಣರಾಜರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲೇ. ರಾಯಲ್ ಸ್ಕೂಲ್ ಎಂಬ ಪ್ರತ್ಯೇಕ ಶಾಲೆಯಲ್ಲಿ ಇವರ ಸಹಪಾಠಿಗಳಾಗಿದ್ದವರು ಮಿರ್ಜಾ  ಇಸ್ಮಾಯಿಲ್, ಲಕ್ಷ್ಮೀಕಾಂತರಾಜ್ ಅರಸ್, ಮುಂತಾದವರು. 1894 ರಲ್ಲಿ ತಂದೆ ಚಾಮರಾಜ ಒಡೆಯರ್ ರವರ ನಿಧನದಿಂದಾಗಿ ಬಾಲಕ ಕೃಷ್ಣರಾಜನಿಗೆ ರಾಜ್ಯದ ಹೊಣೆ ಬಿದ್ದಾಗ ಅವರಿಗೆ ಕೇವಲ 10 ವರ್ಷ. ಪೆಬ್ರವರಿ 1, 1895 ರಲ್ಲಿ ಯುವರಾಜ ಕೃಷ್ಣರಾಜರಿಗೆ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಬ್ರಿಟಿಷ್ ರಿಜೆನ್ಸಿ ಆಳ್ವಿಕೆಯಲ್ಲಿ ಮೈಸೂರಿನ ಗೌರ್ನರ್ ಮತ್ತು ಮಹಾರಾಜರ ಟ್ಯೂಟರ...