Skip to main content

ಲಾಕ್ ಡೌನ್ ತೆರವುಗೊಳಿಸುತ್ತಿರುವ ಈ ಸಮಯ ದಲಿತರು ಬಿಸಿನೆಸ್ ಗೆ ತೆರೆದುಕೊಳ್ಳಲು ಸುಸಮಯ

 






-ರಘೋತ್ತಮ ಹೊ.ಬ


ಒಂದು ಓಟದ ಸ್ಪರ್ಧೆ ( ಅದು ಎಂದೂ ಮುಗಿಯದ ಸ್ಪರ್ಧೆ). ಅಂದಹಾಗೆ ಆ ಓಟದಲ್ಲಿ ಈಗಾಗಲೇ ನೂರಾರು ಮೈಲಿ ಓಡಿರುವವರು ಕೆಲವರು ಇನ್ನೂ ಆರಂಭದ ಗೆರೆಯಲ್ಲೇ ಅಥವಾ ಅದಕ್ಕಿಂತ ಸ್ವಲ್ಪ ಮುಂದೆ ಇರುವವರು. ಆರಂಭದ ಗೆರೆಯಲ್ಲಿ ಇರುವವರು "ನೀವು ಓಡುವಂತಿಲ್ಲ ಎಂಬ ಕಾನೂನು ನಿರ್ಬಂಧದ ಮೂಲಕ ತಡೆಯಲ್ಪಟ್ಟವರು, ಎಚ್ಚೆತ್ತುಕೊಳ್ಳುವಷ್ಟರಲ್ಲಿ ಬಹಳ ಹಿಂದೆಯೇ ಉಳಿಯಲ್ಪಟ್ಟವರು, ಈಗಲೂ ನಿಮ್ಮ ಕೈಯಲ್ಲಿ ಆಗಲ್ಲ ಎಂಬ ಆತ್ಮವಿಶ್ವಾಸ ದ ಕೊರತೆಯಿಂದ ನರಳುತ್ತಿರುವವರು..". ಖಂಡಿತ, ಈ ದೃಷ್ಟಾಂತ ದಲಿತರ ಬಿಸಿನೆಸ್ ಗೆ ಸಂಬಂಧಿಸಿದ್ದು. ಮನುಸ್ಮೃತಿಯಂತಹ ಕಾನೂನುಗಳ ಮೂಲಕ ಇವರಿಗೆ ವ್ಯಾಪಾರ ವ್ಯವಹಾರ ಮಾಡಲು ಶತಶತಮಾನಗಳು ತಡೆಯೊಡ್ಡಲಾಗಿದೆ. ಅಸ್ಪೃಶ್ಯತೆ ಮೂಲಕ " ಅಯ್ಯೋ , ನಮ್ಮ ಕೈಯಲ್ಲಿ ಆಗೋದೆ ಇಲ್ಲ " ಎಂಬ ಮಟ್ಟಕ್ಕೆ ಇವರನ್ನು ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ತಂದು ನಿಲ್ಲಿಸಲಾಗಿದೆ!

ಆದರೆ ಸದ್ಯದ ಅಪರೂಪದ ವಾಸ್ತವ ಎಂದರೆ ಕೊರೊನ ಮತ್ತು ಲಾಕ್ ಡೌನ್ ನ ಈ ಸಮಯದಲ್ಲಿ ನೂರಾರು ಮೈಲಿ ಓಡಿ ಮುಂದೆ ಹೋಗಿದ್ದವರು ಮತ್ತೆ ವಾಪಸ್ ಆರಂಭಿಕ ಗೆರೆಗೆ ಬಂದಿದ್ದಾರೆ. ದಲಿತರ ಜೊತೆಗೆ ನಿಂತಿದ್ದಾರೆ ಅಥವಾ ದಲಿತರು ಅವರ ಜೊತೆ ಇಂದು ಸ್ಪರ್ಧೆ ಮಾಡಲು ಸುಸಮಯ. ಯಥಾಪ್ರಕಾರ ದಲಿತರಿಗೆ ಬಂಡವಾಳ, ಆತ್ಮವಿಶ್ವಾಸ, ನಮ್ಮ ಕೈಯಲ್ಲಿ ಆಗುತ್ತಾ, ನಾವು ಮಾಡಬಹುದಾ ಎಂಬ ಆಲೋಚನೆಗಳು ತೊಡಕಾಗಿ ಕಾಣುತ್ತವೆ. ಆದರೆ ಸ್ಪರ್ಧೆಗೆ ಇಳಿದ ಮೇಲೆ ಭಾಗವಹಿಸಲೇಬೇಕು ಓಡಲೆ ಬೇಕು. ಓಡದಿದ್ದರೆ ಇನ್ನೆಂದೂ ವಿಮೋಚನೆ ಸಾಧ್ಯವಿಲ್ಲ. ಹಾಗೆಯೇ ನಮ್ಮನ್ಯಾರೂ ದೇವಲೋಕದಿಂದ ಅಥವಾ ಸಿನಿಮಾಗಳಲ್ಲಿ ತೋರುವಂತೆ ಅನ್ಯ ಗ್ರಹ ಜೀವಿಗಳು ಕರೆದುಕೊಂಡು ಹೋಗುವುದಿಲ್ಲ. ನಾವೇ ಓಡಬೇಕು, ಓಡಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಲಾಕ್ ಡೌನ್ ನ ಈ ಸಮಯ ಎಲ್ಲರ ಜೊತೆ ಸಮಾನ ಸ್ಪರ್ಧೆ ಆರಂಭಿಸಲು ಖಂಡಿತ ಸುಸಮಯ.

ಆಗಬೇಕಾದ್ದೆಂದರೆ ಮೈಕೊಡವಿ ಏಳಬೇಕಿರುವುದು. ಆದದ್ದು ಆಗುತ್ತದೆ ಒಂದು ಕೈ ನೋಡೇ ಬಿಡುವ ಎಂಬ ಚಾಲೆಂಜ್ ಈಗ ಬೇಕಿರುವುದು. ವ್ಯಾಪಾರ ವ್ಯವಹಾರ ನಷ್ಟ ಆಗುತ್ತದಾ? ಆಗಲಿ. ನಷ್ಟ ನಮಗೆ ಹೊಸದೇನಲ್ಲ ತಾನೇ? ಲಾಭ ಬಂದರೆ ? ನಮ್ಮ ಸಮುದಾಯದ ಬದುಕೇ ಬದಲಾಗುತ್ತದೆ. ದಿಕ್ಕೇ ಬದಲಾಗುತ್ತದೆ. ಅಂದರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ ಎಲ್ಲಾ ಪಡೆದುಕೊಳ್ಳುವುದೇ ಆಗಿದೆ. ಇದನ್ನೇ ಡಾ.ಅಂಬೇಡ್ಕರ್ ರವರು ಹೇಳಿರುವುದು. 

ಎಷ್ಟೋ ಜನ ದಲಿತರು ವಿಶೇಷವಾಗಿ ಸರ್ಕಾರಿ ನೌಕರರು ತಮ್ಮ ಮಕ್ಕಳಿಗೆ ತಮ್ಮ ಹಾಗೆ ಸರ್ಕಾರಿ ನೌಕರಿ ಕೊಡಿಸುವ ಕುರುಡು ಮಾತಾಡುತ್ತಾರೆ. ಆದರೆ ಒಂದು ವಾಸ್ತವ, ಸರ್ಕಾರಿ ನೌಕರಿ ವಂಶಪಾರಂಪರ್ಯವಲ್ಲ. ಆದರೆ ವ್ಯಾಪಾರ ವ್ಯವಹಾರ, ಬಿಸಿನೆಸ್ ವಂಶಪಾರಂಪರ್ಯ. ತಂದೆ ಮಾಡಿಟ್ಟರೆ ಮಗ ಅದನ್ನು ಮುಂದುವರೆಸಬಹುದು. ಆ ಮೂಲಕ ಸಮುದಾಯ ಕೂಡ ಶ್ರೀಮಂತ ಆಗುತ್ತದೆ. ಇಂತಹ ಶ್ರೀಮಂತರು ದಲಿತ ಸಮುದಾಯದಲ್ಲಿ ಹೆಚ್ಚು ಹೆಚ್ಚು ಬೆಳೆದರೆ ಅಲ್ಲಿ ಇಡೀ ಸಮುದಾಯಕ್ಕೆ ಆತ್ಮವಿಶ್ವಾಸ ಸಿಗುತ್ತದೆ. ನಿಂದನೆ, ಅಪಮಾನ ತಾನಾಗೇ ಕಡಿಮೆಯಾಗುತ್ತದೆ.

ಬಿಸಿನೆಸ್ ಆರಂಭಿಸುವಾಗ ನಾವು ದಲಿತರು ನಮ್ಮ ಹತ್ತಿರ ಯಾರು ಬರುತ್ತಾರೆ? ಎಂಬ ಪ್ರಶ್ನೆ ಬಂದೇ ಬರುತ್ತದೆ. ಅಂದಹಾಗೆ ನಾವು ಏನೂ ಮಾಡದೆ ಮನೆಯಲ್ಲಿ ಕುಳಿತರು ಕೂಡ ನಾವು ದಲಿತರೆ! ಆಗಲಾದರೂ ನಮ್ಮ ಬಳಿ ಯಾರಾದರೂ ಬರುತ್ತಾರಾ? ಇಲ್ಲ. ಆದ್ದರಿಂದ ನಾವು "ನಾವು ದಲಿತರು, ನಮ್ಮನ್ನು ಅಸ್ಪೃಶ್ಯತೆ ಕಾಡುತ್ತದೆ" ಎಂಬ basic ಚಿಂತನೆ ಅರಬ್ಬೀ ಸಮುದ್ರಕ್ಕೆ ಎಸೆದು ಏಳಬೇಕು. ಯಾವುದಾದರೊಂದು ಫುಟ್ ಪಾತ್ ವ್ಯಾಪಾರ ವ್ಯವಹಾರ ಆದರೂ ಸರಿ ಆರಂಭಿಸಬೇಕು. ಒಂದು ಟೀ ಅಂಗಡಿ, ಒಂದು ಹೊಟೆಲ್, ಒಂದು ದಿನಸಿ ಅಂಗಡಿ, ಬಟ್ಟೆ ಅಂಗಡಿ... ಹೀಗೆ. ಅಂತಿಮವಾಗಿ ಲೇಖನ ಲಾಭ ಬಂದೇ ಬರುತ್ತದೆ. ಈಗಲ್ಲದಿದ್ದರೂ ನಮ್ಮ ಮಕ್ಕಳ ಕಾಲಕ್ಕೆ ಮೊಮ್ಮಕ್ಕಳ ಕಾಲಕ್ಕೆ ಬಂದೇ ಬರುತ್ತದೆ. ಆಗ ನಮ್ಮ ಮುಂದಿನ ಭವಿಷ್ಯದ ಜನಾಂಗ "ನಿಮ್ಮ ತಾತ ಏನ್ ಮಾಡ್ತಿದ್ದ?" ಎಂದು ಯಾರಾದರೂ ಪ್ರಶ್ನೆ ಕೇಳಿದರೆ "ವ್ಯಾಪಾರ ವ್ಯವಹಾರ ಮಾಡ್ತಿಧ" ಎಂದು ಹೇಳುತ್ತದೆ. 

ಈ ನಿಟ್ಟಿನಲ್ಲಿ ಅವರು ಹೇಳಬೇಕಾದರೆ ಹೇಳುವಂತಾಗಬೇಕಾದರೆ ಹಾಲಿ ದಲಿತರು ಅದು ರಾಜ್ಯದಲ್ಲಿ ಒಂದು ಕೋಟಿಗೂ ಮಿಕ್ಕಿ ಒಂದು ದೇಶದ ಜನಸಂಖ್ಯೆಯಷ್ಟಿರುವ ದಲಿತರು ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರಬೇಕು. ಲಾಕ್ ಡೌನ್ ತೆರವಿನ ಈ ಸಮಯ ದಲಿತರು ವ್ಯಾಪಾರ ವ್ಯವಹಾರ ದಲ್ಲಿ ತೊಡಗಿಸಿಕೊಳ್ಳಲು ಸುಸಮಯ ಎಂಬುದನ್ನು ಅರಿಯಬೇಕು. 

***

Comments

Popular posts from this blog

ಅವಕಾಶ ಕಿತ್ತುಕೊಳ್ಳಬೇಕು -ರಘೋತ್ತಮ ಹೊ.ಬ

ಶೋಷಿತ ಸಮುದಾಯಗಳ ಎಷ್ಟೋ ಜನ ಯಾರಾದರೂ ನಮ್ಮನ್ನು ನಮ್ಮ ಒಳ್ಳೆಯತನ ನೋಡಿ ಉದ್ಧಾರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ವಾಸ್ತವ ಎಂದರೆ ಅದು ಹಾಗಲ್ಲ ಎಂಬುದು. ಉದಾಹರಣೆಗೆ ಕಚೇರಿಗಳಲ್ಲಿ "ಡಿ" ಗ್ರೂಪ್ ನೌಕರಿ ಕೆಲಸ ಒಬ್ಬ ಮಾಡುತ್ತಿರುತ್ತಾನೆ ಎಂದುಕೊಳ್ಳಿ. ಪ್ರಶ್ನೆ ಎಂದರೆ ಅಲ್ಲಿಯ ಅಧಿಕಾರಿ ಆ ಡಿ ಗ್ರೂಪ್ ನೌಕರರನಿಗೆ ಆತನ ಒಳ್ಳೆಯತನ ನೋಡಿ ಕರೆದು ತನ್ನ ಸ್ಥಾನ ಕೊಡುತ್ತಾನೆಯೇ? ಇಲ್ಲ. ಹೆಚ್ಚೆಂದರೆ ಅದನ್ನು ಆತ ಆತನ ನಿಷ್ಠೆ ಎಂದುಕೊಳ್ಳಬಹುದು ಒಂದಷ್ಟು ಸಿಂಪಥಿ ತೋರಬಹುದು ಅಷ್ಟೇ. ಭಾರತದ ಸಾಮಾಜಿಕ ವ್ಯವಸ್ಥೆಯು ಕೂಡ ಹೀಗೇನೆ‌. ಹಾಗಿದ್ದರೆ ಡಿ ಗ್ರೂಪ್ ನೌಕರ ಏನು ಮಾಡಬಹುದು? ತನ್ನ ಮಗನನ್ನು ಅಥವಾ ಮಗಳನ್ನು ಆ ಅಧಿಕಾರಿ ಮಟ್ಟಕ್ಕೆ ಓದಿಸಿ ಆ ಸ್ಥಾನ ಪಡೆಯಬಹುದು ಅವಕಾಶ ಪಡೆಯಬಹುದು. ಶೋಷಿತ ಸಮುದಾಯಗಳು ಅಷ್ಟೇ, ಚೆನ್ನಾಗಿ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆದರೆ ಅಥವಾ ಪ್ರಸ್ತುತ ದಿನಗಳಲ್ಲಿ ಬುದ್ಧಿವಂತಿಕೆಯಿಂದ ಯಾವುದಾದರೂ ಬಿಸಿನೆಸ್ ನಲ್ಲಿ do or die ಮಾದರಿಯಲ್ಲಿ ಶ್ರಮ ಹಾಕಿ ಯಶಸ್ಸು ಪಡೆದರೆ ಆ ಸ್ಥಾನ ಪಡೆಯಬಹುದು. ಯಾರೂ ಕೂಡ ಕರೆದು ಅವಕಾಶ ಕೊಡುವುದಿಲ್ಲ.  ಘಟನೆಯೊಂದನ್ನು ಹೇಳುವುದಾದರೆ, ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದಿತ್ತು. ನಾನು ವಯಕ್ತಿಕವಾಗಿ ಯಾರು ನನ್ನನ್ನು ಕರೆಯಲಿ ಬಿಡಲಿ ಎಂದು ನನ್ನ ಸ್ಥಾನವನ್ನು ಭದ್ರವಾಗಿ ಪಡೆದೆ ಒಂದು ಚೇರ್ ಮೇಲೆ ನಾನೇ ಹೋಗಿ ಕುಳಿತುಕೊಳ್ಳುವುದರ ಮೂಲಕ. ಆದರೆ ದಲಿತ ಸಮುದಾಯ...

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

  ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!  ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು.  ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯ...

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...