Skip to main content

ಶೌಚಾಲಯ ಶುಚಿಗೊಳಿಸುವುದನ್ನು "ಆ ಸಮುದಾಯ"ದವರೇ ಮಾಡಬೇಕೆ?

 


ಸಂಸ್ಥೆಯೊಂದರಲ್ಲಿ ಮೀಟಿಂಗ್ ನಡೆಯುತ್ತಿತ್ತು. ಸದಸ್ಯರೊಬ್ಬರು "ನಮ್ಮ ಸಂಸ್ಥೆಯ ಶೌಚಾಲಯಗಳೆಲ್ಲವೂ ಗಲೀಜು ಆಗಿವೆ. ಆ ಯಮ್ಮನನ್ನು ಕರೆಸಿ" ಎಂದು ಮುಖ್ಯಸ್ಥರನ್ನು ಒತ್ತಾಯಿಸಿದರು. ಮತ್ತೊಬ್ಬರು "ಆ ಯಮ್ಮ ಸರಿಯಾಗಿ ಕ್ಲೀನ್ ಮಾಡೋಲ್ಲ, ಅವಳಿಗೆ ಕೊಬ್ಬು,"  ಹೀಗೆ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತಾಡುತ್ತ ಹೋದರು!

 ಹೌದು, ಅವರು ಮಾತಾಡುತ್ತಿದ್ದದ್ದು ಅಸ್ಪೃಶ್ಯ ಸಮುದಾಯವಾದ ಪೌರಕಾರ್ಮಿಕ ಸಮುದಾಯದ ಮಹಿಳೆಯೊಬ್ಬರ ಬಗ್ಗೆ. ಎಷ್ಟು ಕ್ರೂರವಾಗಿ ಅವರು ಆಕೆಯ ಬಗ್ಗೆ ಮಾತನಾಡುತ್ತಿದ್ದರೆಂದರೆ ಅವಳು ಕೂಡ ಮನುಷ್ಯಳು, ಅವಳಿಗೂ ಕೂಡ ಮಾನವ ಹಕ್ಕಿದೆ, ಆಕೆಗೂ ಕೂಡ ಗೌರವ ಕೊಡಬೇಕು, ಊಹ್ಞೂಂ, ಇಂತಹ ಸಣ್ಣ ಮನೋಭಾವವೂ ಅವರಲ್ಲಿರಲಿಲ್ಲ. ಜಾತಿ ವ್ಯವಸ್ಥೆಯ ಭೀಕರ ಚಿತ್ರಣ ಅಲ್ಲಿ ಎದ್ದು  ಕಾಣುತ್ತಿತ್ತು. 

ಈ ದಿಸೆಯಲ್ಲಿ ಉಕ್ಕಿಬರುವ ಪ್ರಶ್ನೆಗಳೇನೆಂದರೆ ಶೌಚಾಲಯ ಶುಚಿಗೊಳಿಸುವುದನ್ನು ಪೌರಕಾರ್ಮಿಕ ಸಮುದಾಯವೇ ಏಕೆ ಮಾಡಬೇಕು? ಆ ಕಾಯಕವನ್ನು ಎಲ್ಲಾ ಜಾತಿಯವರು ಏಕೆ ಮಾಡಬಾರದು? ಯಾಕೆಂದರೆ ಉದಾಹರಣೆಗೆ ವ್ಯಕ್ತಿಗಳು ಅವರು ಶೌಚ ಮಾಡಿದ ನಂತರ ಅವರದ್ದನ್ನು ಅವರೇ ತೊಳೆದುಕೊಳ್ಳುತ್ತಾರಲ್ಲವೇ? ಅದಕ್ಕೂ ಒಬ್ಬ ಆಳನ್ನು "ಇಲ್ಲ, ಇದನ್ನು ನಾನು ಮುಟ್ಟುವುದಿಲ್ಲ. ಇದು ಗಲೀಜು"ಎಂದು ನೇಮಿಸಿಕೊಳ್ಳುತ್ತಾರೆಯೇ? ಇಲ್ಲ. ಹೀಗಿರುವಾಗ ಅವರದ್ದನ್ನು ಅವರು ತೊಳೆದುಕೊಳ್ಳುವಾಗ ಶೌಚಾಲಯ ಶುಚಿಗೊಳಿಸಲು ನಿರ್ದಿಷ್ಟ ಸಮುದಾಯದವರನ್ನು ಯಾಕೆ ಕರೆಯಬೇಕು? 

 ಮೊನ್ನೆ ಟಿಬೆಟಿಯನ್ ಕ್ಯಾಂಪ್ ಬೈಲಕುಪ್ಪೆಗೆ ಹೋಗಿದ್ದೆ. ಅಲ್ಲಿ ಕೆಲಸವನ್ನು ಅಂದರೆ ಹೊಟೆಲ್ ನಲ್ಲಿ ಊಟ ಬಡಿಸುವುದು, ಅಡುಗೆ ಮಾಡುವುದು, ಕಸ ಗುಡಿಸುವುದು, ಶೌಚಾಲಯ ಶುಚಿಗೊಳಿಸುವುದು... ಹೀಗೆ ಎಲ್ಲವನ್ನು ಎಲ್ಲರೂ ಮಾಡುತ್ತಾರೆ. ನನ್ನ ಕಣ್ಣೆದುರೇ ಅತಿಥಿ ಗೃಹವೊಂದರಲ್ಲಿ ವ್ಯಕ್ತಿಯೊಬ್ಬ ಎಲ್ಲಾ ಶೌಚಾಲಯಗಳನ್ನು ಶುಚಿಗೊಳಿಸಿದ. ಸ್ನಾನ ಮಾಡಿ ಮಧ್ಯಾಹ್ನ ಅತಿಥಿಗೃಹದ ಆ ಹೊಟೆಲ್ ನಲ್ಲಿ ಅಡುಗೆ ಭಟ್ಟನಾಗಿಯೂ ಕೆಲಸ ಮಾಡಿದ, ಸಾಯಂಕಾಲ ನಮ್ಮ ಜೊತೆ ಫುಟ್ಬಾಲ್ ಆಡಲು ಬಂದ! ಅಲ್ಲಿ ಆತನ ಕೆಲಸಕ್ಕೆ ತಾರತಮ್ಯ ಎಂಬ ಮಾತೇ ಇರಲಿಲ್ಲ. ಮತ್ತು ಆತನಿಂದ ಅಡುಗೆ ಮಾಡಿಸಿ ತಿಂದ ನಾವೇನು‌ ಸತ್ತು ಹೋಗಲಿಲ್ಲ. ಆದರೆ ನಮ್ಮಲ್ಲಿ? ನಿರ್ದಿಷ್ಟ ಆ ಕೆಲಸ ಮಾಡಲು ಅದೇ ಜಾತಿಯವರು ಬೇಕು. ನಮ್ಮ ಸರ್ಕಾರಗಳೂ ಅಷ್ಟೇ ನಗರಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಬೀದಿ ಶುಚಿಗೊಳಿಸಲು ಅದೇ ಜಾತಿಯವರನ್ನು ನೇಮಕ ಮಾಡಿಕೊಳ್ಳುತ್ತದೆ. ಅವರಿಗೆ ಸುರಕ್ಷತೆಯ ಯಾವ ಸಾಧನವೂ ಇಲ್ಲ. ಆರೋಗ್ಯವಂತು ಇಲ್ಲವೇ ಇಲ್ಲ. ದೌರ್ಜನ್ಯದ ಪರಾಕಾಷ್ಠೆ ಅನ್ನುತ್ತಾರಲ್ಲ ಅದು ಮೇರೆ ಮೀರುತ್ತದೆ.

ಪ್ಲೀಸ್, ಇದು ಎಲ್ಲಿಯವರೆಗೆ? 

ಹಾಗೆಯೇ ಕೆಲವರು ಹೇಳುತ್ತಾರೆ " ಅವರೇ ಬರುತ್ತಾರೆ ಸಾರ್, ನಾವೇನು ಕರೀತೀವಾ?" ಎಂದು. ಆದರೆ ನಮ್ಮ ‌ನಮ್ಮ ಶೌಚಾಲಯಗಳನ್ನು ನಾವೇ ತೊಳೆದುಕೊಂಡರೆ ಆ ಅಭ್ಯಾಸ ರೂಢಿಸಿಕೊಂಡರೆ ಅವರ್ಯಾಕೆ ಬರುತ್ತಾರೆ? ಇಂತಹ ಅಭ್ಯಾಸ ತೊಲಗಬೇಕು. ಯಾಕೆಂದರೆ ಯಾವ ಕೋರ್ಟ್ ಕೂಡ ತೀರ್ಪು ಇತ್ತಿಲ್ಲ ಶೌಚಾಲಯವನ್ನು ಪೌರಕಾರ್ಮಿಕ ಸಮುದಾಯವೇ ಮಾಡಬೇಕು ಎಂದು. ಹಾಗೆಯೇ ಯಾವ ಸಂವಿಧಾನ, ಪಾರ್ಲಿಮೆಂಟ್ ಕೂಡ ಅಂತ ಶಾಸನ ಮಾಡಿಲ್ಲ ಶೌಚಾಲಯವನ್ನು ಪೌರಕಾರ್ಮಿಕ ಸಮುದಾಯವೇ ಮಾಡಬೇಕು ಎಂದು. ಹೀಗಿರುವಾಗ ಯಾಕೆ ಹೀಗೆ? ಇನ್ನೆಷ್ಟು ದಿನ ಇಂತಹ ಉದ್ಯೋಗಾಧಾರಿತ ಜಾತಿ ತಾರತಮ್ಯದ ರೋಗ? 

ದಯವಿಟ್ಟು ಬಿಟ್ಟುಬಿಡೋಣ. ನಮ್ಮ ನಮ್ಮ ಶೌಚಾಲಯಗಳನ್ನು ನಾವೇ ತೊಳೆದುಕೊಳ್ಳೋಣ. ಗಾರೆ ಕೆಲಸ, ವರ್ಕ್ ಶಾಪ್ ಕೆಲಸಗಳನ್ನು ಎಲ್ಲರೂ ಮಾಡುವಂತೆ ಶೌಚಾಲಯ ಶುಚಿಗೊಳಿಸುವ ಕೆಲಸವನ್ನು ಎಲ್ಲರೂ ಎಲ್ಲಾ ಜಾತಿಯವರು ಮಾಡೋಣ. ಬೇಕಿದ್ದರೆ ತುಸು ಜಾಸ್ತಿ ಕೂಲಿ ಪಡೆದುಕೊಳ್ಳೋಣ. ಈ ದಿಸೆಯಲ್ಲಿ ಪೌರಕಾರ್ಮಿಕ ಸಮುದಾಯದ ಮೇಲೆ ನಾವು ನಡೆಸುತ್ತಿರುವ ಈ ಭೀಕರ ಮಾನವ ಹಕ್ಕು ದೌರ್ಜನ್ಯ ವಿರೋಧಿ ನಡೆಯಿಂದ ನಾವು ಹಿಂದೆ ಸರಿಯೋಣ.

     -ರಘೋತ್ತಮ ಹೊ.ಬ

Raghothama Hoba

Comments

Popular posts from this blog

ಜಾತಿ ಮತ್ತು ಅಸಮಾನತೆಯನ್ನು ಬುದ್ಧರು ಹೇಗೆ ಪ್ರಶ್ನಿಸುತ್ತಾರೆಂದರೆ...

- ರಘೋತ್ತಮ ಹೊಬ ತ್ರಿಪಿಟಕಗಳಲ್ಲಿ ಅದರಲ್ಲೂ ಸುತ್ತ ಪಿಟಕದ ಅಸ್ಸಲಾಯನ ಸುತ್ತ ಎಂಬ ಕತೆಯಲ್ಲಿ ಬುದ್ಧರು ಜಾತಿ ಮತ್ತು ಅಸಮಾನತೆ ವಿರೋಧಿಸಿ ಮಾತನಾಡುತ್ತಾರೆ. ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಮಹಿಳೆಯರು ಕೂಡ ಋತು ಚಕ್ರ ಅನುಭವಿಸುತ್ತಾರೆ, ಗರ್ಭ ಧರಿಸುತ್ತಾರೆ. ಅವರಿಗೂ ಹೆರಿಗೆಯಾಗುತ್ತದೆ, ಮಗು ಆಗುತ್ತದೆ. ಇಂತಹ ಪ್ರಾಕೃತಿಕ ಪದ್ಧತಿ ಹೊರತುಪಡಿಸಿ ಅವರಿಗೆ ಇತರೆ ಯಾವುದಾದರೂ ಬೇರೆ ವಿಧಾನ ಇದೆಯೇ? ಹಾಗಿದ್ದರೆ ಅವರು ಹೇಗೆ ಇತರರಿಗಿಂತ ಭಿನ್ನ? ಅಥವಾ ಶ್ರೇಷ್ಠ?" ಹೀಗೆ ಬುದ್ಧರು ಅಸಮಾನತೆ ಮತ್ತು ಜಾತಿಯನ್ನು ಪ್ರಶ್ನಿಸುತ್ತಾರೆ.  ಹಾಗೆ ಅದೇ ಕತೆಯಲ್ಲಿ ಬುದ್ಧರು ಹೇಳುವುದು "ಶ್ರೇಷ್ಠ ಕುಲದ ಒಬ್ಬ ಯುವಕ ಮತ್ತು ಅದೇ ಕುಲದ ಒಬ್ಬ ಕನ್ಯೆ ಇಬ್ಬರೂ ಕೂಡಿದರೆ ಮನುಷ್ಯ ಜೀವಿ ಜನಿಸದೆ ಯಾವುದಾದರೂ ಪ್ರಾಣಿ ಜನಿಸುವುದೇ? ಹೀಗಿರುವಾಗ ಅವರು ಹೇಗೆ ಶ್ರೇಷ್ಠ?". ಹೇಳಿ ಹೇಗೆ ಶ್ರೇಷ್ಠ? ***

Why did Dr Ambedkar converted to Buddhism? -Raghothama Hoba

Yesterday, someone asked me why did Dr.Ambedkar converted to "Buddhism",  But next series of questions he forget to ask me is “Why untouchability is still practiced against some caste in society? Why some caste people were kept away from temples? Why some caste and people belonging to those caste were being denied opportunities in every field of life such as business, trade, commerce, private companies, hotels, markets etc,. Why some caste people were meant to do menial jobs, scavenging and other things? To continue, why some caste people still being denied or avoided to get higher education? Why some caste people are unnecessarily tortured in working areas whether it is government or private. Answer to all this is untouchability. Let we call those people who are being subjected to untouchability as untouchables or Dalits or scheduled caste people. Now one has to think himself, what could happen if someone kept away from temples or made to stand outside the temple? Won’t it h...

ಅಂದು ಪರಿಶಿಷ್ಟರ ಮೀಸಲಾತಿ ರದ್ದುಮಾಡಲು ಹೊರಟಾಗ ಅಂಬೇಡ್ಕರ್ ರವರ ಆಕ್ರೋಶ ಹೇಗಿತ್ತೆಂದರೆ... -ರಘೋತ್ತಮ ಹೊ.ಬ

1947 ಜನವರಿ ತಿಂಗಳ ಒಂದು ದಿನ "ಸಂವಿಧಾನ ಸಭೆ" (Constituent assembly) ಸಭೆ ಸೇರುತ್ತದೆ. ಅಂದು ಆ ಸಭೆ ಸೇರುವ ಉದ್ದೇಶ ಅರಿತಿದ್ದ ಬಾಬಾಸಾಹೇಬ್ ಅಂಬೇಡ್ಕರರು ಸಭೆಯ ಸದಸ್ಯರಾಗಿದ್ದರು ಕೂಡ ಸಭೆಯಿಂದ ದೂರ ಉಳಿದಿದ್ದರು. ಯಥಾಪ್ರಕಾರ ಸಂವಿಧಾನ ಸಭೆಯ "ಅಲ್ಪಸಂಖ್ಯಾತರ ಉಪಸಮಿತಿ"ಯ ಅಧ್ಯಕ್ಷರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಆ ದಿನ ಒಂದು ತಂತ್ರಗೈದು ಸಮಿತಿಯ ಅಧ್ಯಕ್ಷರಾದ ತಾವೇ ಹಾಜರಿದ್ದರೂ ಆಚಾರ್ಯ ಕೃಪಲಾನಿಯವರನ್ನು ಅಂದು ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ತಿಳಿಸುತ್ತಾರೆ. ಅಲ್ಲದೇ ಸರ್ದಾರ್ ವಲ್ಲಭಭಾಯ್ ಪಟೇಲರು ಅಂದು ಮಂಡಿಸುವ ನಿಲುವನ್ನು ಬೆಂಬಲಿಸುವ ಸಮಿತಿಯ ಸದಸ್ಯರುಗಳಿಗೆ ರಾಜ್ಯಪಾಲ, ಮುಖ್ಯಮಂತ್ರಿ.. ಹೀಗೆ ವಿವಿಧ ಹುದ್ದೆಗಳನ್ನು ನೀಡುವ ಆಮಿಷ ಒಡ್ಡಲಾಗಿರುತ್ತದೆ ! ಈ ಹಿನ್ನೆಲೆಯಲ್ಲಿ ಅಂದು ಸಭೆ ಸೇರಿದ ಸಂವಿಧಾನ ಸಭೆಯ ಆ "ಅಲ್ಪಸಂಖ್ಯಾತರ ಉಪಸಮಿತಿ" ಕೈಗೊಂಡ ನಿರ್ಣಯವೆಂದರೆ ಎಸ್ಸಿ, ಎಸ್ಟಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೂ ಮೀಸಲಾತಿ ರದ್ದುಗೊಳಿಸುವ ನಿರ್ಧಾರ!! ಅಂದಹಾಗೆ ಹೀಗೆ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ರದ್ದುಗೊಳಿಸುವ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ಮಾರನೇ ದಿನದ "ಹಿಂದೂಸ್ತಾನ್ ಟೈಮ್ಸ್" ಮತ್ತು "ಸ್ಟೇಟ್ಸ್ ಮನ್" ನಂತಹ ಇಂಗ್ಲಿಷ್ ಪತ್ರಿಕೆಗಳು ಈ ಸುದ್ದಿಗೆ ನೀಡಿದ ಹೆಡ್ ಲೈನ್ಸ್ ಏನು ಗೊತ್ತೇ? ಇಂದು Red letter day (ಇತಿಹಾಸದಲ್ಲಿ...