Skip to main content

ದಲಿತ ಸಮುದಾಯಗಳ ಪೋಷಕರು ತಮ್ಮ ಮಕ್ಕಳನ್ನು ಬೆಳೆಸಬೇಕಾದ ಬಗೆ -ರಘೋತ್ತಮ ಹೊ.ಬ


ಆಗಾಗ ನಾನು ಕೆಲವೊಮ್ಮೆ ದಲಿತ ಸಮುದಾಯಗಳ ಶಾಲಾಮಕ್ಕಳನ್ನು ಗಮನಿಸುತ್ತಿರುತ್ತೇನೆ. ವಿಶೇಷವಾಗಿ ಹಳ್ಳಿಗಳಲ್ಲಿ. ಹಳ್ಳಿಗಳಲ್ಲಿ ಮಕ್ಕಳು ಅನ್ಯಜಾತಿಯ ಮಕ್ಕಳ ಜೊತೆ ಬೆರೆಯುವಾಗ ಹಿಂಜರಿಕೆ ತೋರುತ್ತವೆ, ಕೀಳು ಮನೋಭಾವದಿಂದ ನರಳುತ್ತವೆ. ಇದಕ್ಕೆ ಕಾರಣ ಆ ಮಕ್ಕಳ ಪೋಷಕರು. ಯಾಕೆಂದರೆ ನಮಗೆ ತಿಳಿದಂತೆ ಮಕ್ಕಳ ಮಾತು, ಕೃತಿ, ನಡತೆ ಎಲ್ಲವೂ ಪೋಷಕರು ಹೇಗೆ ವರ್ತಿಸುತ್ತಾರೊ ಹಾಗೆಯೇ ಇರುತ್ತವೆ. ಈ ನಿಟ್ಟಿನಲ್ಲಿ ಇದರ ಅಪಾಯವನ್ನು ದಲಿತ ಸಮುದಾಯಗಳ ಪೋಷಕರು ಅರಿಯಬೇಕು‌. ಅಕಸ್ಮಾತ್ ಅರಿಯದಿದ್ದರೆ ಬೇಜವಾಬ್ದಾರಿತನದಿಂದ ವರ್ತಿಸಿದರೆ ಖಂಡಿತ ಇದು ದಲಿತ ಸಮುದಾಯಗಳ ಪೋಷಕರು ತಮ್ಮ ಮಕ್ಕಳಿಗೆ ಕೊಡುವ ಕೆಟ್ಟ ಉಡುಗೊರೆಯಾಗುತ್ತದೆ, ಅವರ ಆತ್ಮವಿಶ್ವಾಸ ಕುಗ್ಗಿಸುವ ಕೊಡುಗೆಯಾಗುತ್ತದೆ.

ಉದಾಹರಣೆಗೆ ಹಳ್ಳಿಗಳಲ್ಲಿ ದಲಿತ ಸಮುದಾಯಗಳ ಪೋಷಕರು ಅನ್ಯ ಜಾತಿಯ ಜನರನ್ನು "ಸ್ವಾಮಿ, ಬುದ್ಧಿ, ಗೌಡ್ರೆ, ಯಜಮಾನ್ರೆ, ಅಪ್ಪೋ, ಅಮ್ಮೋ, ಅವ್ವಾರೆ, ಅಪ್ಪಾರೆ..." ಹೀಗೆ ಕರೆಯುತ್ತಾರೆ. ಅಂದಹಾಗೆ ಸಹಜವಾಗಿ ಇದನ್ನು ಅನುಕರಿಸುವ ಮಕ್ಕಳುಗಳು ಅನ್ಯ ಜಾತಿಗಳ ಮಕ್ಕಳುಗಳನ್ನು ಕೂಡ ಹಾಗೆಯೇ ಕರೆಯುತ್ತವೆ! ಅಥವಾ ಕರೆಯದಿದ್ದರೂ ಸದಾ ಹೆದರಿ ಸಂಭೋಧಿಸುತ್ತವೆ. ಇದು ಆ ಮಗುವಿನಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಬೆಳವಣಿಗೆಯ ಹಂತದಲ್ಲೇ ನಿರಂತರ ಕೀಳು ಮನೋಭಾವವನ್ನು ಹುಟ್ಟುಹಾಕುತ್ತಾ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಯಾವ ಮಟ್ಟಿಗೆಂದರೆ ಮುಂದೆ ಆತ ಓದಿ ದೊಡ್ಡ ಅಧಿಕಾರಿಯಾದರೂ ಆತನಲ್ಲಿ ಬೆಳೆದುಬಿಡುವ ಕೀಳು ಮನೋಭಾವ ಆತನಿಗೆ ತನ್ನ ಅಧಿಕಾರ ಚಲಾಯಿಸಲು ಬಿಡುವುದಿಲ್ಲ ಅಥವಾ ತಡೆಯಾಗುತ್ತದೆ. ಬರೀ ಅಷ್ಟೇ ಅಲ್ಲ, ದಲಿತ ಸಮುದಾಯದ ಮಗು ವಿದ್ಯಾರ್ಥಿ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳ ಮೇಲೂ ಇಂತಹ ಮನೋಭಾವ ದೊಡ್ಡ ಗೋಡೆಯಾಗಿ ಎದುರು ನಿಲ್ಲುತ್ತದೆ. ಖಂಡಿತ ಇದು ಅಪಾಯಕಾರಿ. ದಲಿತ ಸಮುದಾಯಗಳ ಪೋಷಕರು ನಿರಂತರವಾಗಿ ಬಹಳ ಗಂಭೀರವಾಗಿ ಗಮನಿಸಬೇಕಾದ ಅಂಶವಿದು.

ಯಾಕೆಂದರೆ ಒಮ್ಮೆ ಕೀಳು ಎಂಬ ಮನೋಭಾವವನ್ನು ಹೀಗೆ ಇಂತಹ ನಿರಂತರ ಪ್ರಕ್ರಿಯೆಗಳ ಮೂಲಕ ಹುಟ್ಟುಹಾಕಿದರೆ ಆ ಮನೋಭಾವ ಶಾಶ್ವತವಾಗಿ ಉಳಿದುಬಿಡುತ್ತದೆ. ಅಸ್ಪೃಶ್ಯತೆಯನ್ನು ಕಾನೂನು ನಿಷೇಧಿಸಿದರೂ ಹಾಗೆ ಉಳಿದುಬಿಡುವ ಶಾಶ್ವತ ಕೀಳು ಮನೋಭಾವ ನಿಷೇಧಿಸುವುದಿಲ್ಲ ಅಥವಾ ಅಸ್ಪೃಶ್ಯತೆಯಿಂದ ಹೊರಗಡೆ ಬರುವ ಮನೋಭಾವವನ್ನು ಅದು ದಲಿತ ಸಮುದಾಯದ ವ್ಯಕ್ತಿಗಳಲ್ಲಿ ಸೃಜಿಸುವುದಿಲ್ಲ. ಬದಲಿಗೆ ಗುಲಾಮನಿಗೆ ಗುಲಾಮಗಿರಿಯನ್ನು ಎಂಜಾಯ್ ಮಾಡುವಂತೆ ಅದು ಕಟ್ಟಿಹಾಕುತ್ತದೆ.

ಇದಕ್ಕೆ ಪರಿಹಾರ? ದಲಿತ ಸಮುದಾಯದ ಪೋಷಕರು ತಮಗಲ್ಲದಿದ್ದರೂ ಮಕ್ಕಳಿಗೋಸ್ಕರ ಅನ್ಯಜಾತಿಯ ಜನರನ್ನು "ಸ್ವಾಮಿ, ಬುದ್ಧಿ, ಯಜಮಾನ್ರೆ, ಗೌಡ್ರೆ, ಅಮ್ಮೋ, ಅಪ್ಪೋ, ಅವ್ವಾರೆ, ಅಪ್ಪಾರೆ..." ಹೀಗೆ ಸಂಬೋಧಿಸುವುದನ್ನು ಬಿಡಬೇಕು. ಯಾವುದೇ ಕಾರಣಕ್ಕೂ ತಮ್ಮ ಮಕ್ಕಳ ಮುಂದೆ ಅನ್ಯಜಾತಿ ಜನರೆದುರು ಕೀಳು ಜನರ ರೀತಿ ನಡೆದುಕೊಳ್ಳಬಾರದು ಅಥವಾ ನಡೆದುಕೊಳ್ಳುವುದರಿಂದ ದೂರ ಸರಿಯಬೇಕು. ಸಾಧ್ಯವಾದರೆ ದೌರ್ಜನ್ಯ ಬಯಸುವ, ದೌರ್ಜನ್ಯ ಮಾಡುವ ಅಂತಹ ಅನ್ಯಜಾತಿಯ ಜನರಿಂದ ಎಷ್ಟು ಸಾಧ್ಯವೋ ಅಷ್ಟು ಅಂತರ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ಅಂತಹ ವಾತಾವರಣವೇ ಪರಿಚಯವಾಗದ ಹಾಗೆ ಬದುಕಬೇಕು. ಅಕಸ್ಮಾತ್ ಹಳ್ಳಿಗಳಲ್ಲಿ ಅಸ್ಪೃಶ್ಯತೆಯ ವಾತಾವರಣ ಇದೆ ಎಂದರೆ ಅವರನ್ನು ಪಟ್ಟಣಗಳಿಗೆ ಹಾಸ್ಟೆಲ್ಗಳಿಗೆ ಸೇರಿಸಬೇಕು. ಹಾಗೆ ಅವರಿಗೆ ಬಾಲ್ಯದಲ್ಲಿಯೇ ಅಂಬೇಡ್ಕರ್, ಬುದ್ಧ, ಬಸವಣ್ಣ, ಜ್ಯೋತಿಬಾ ಫುಲೆ, ಪೆರಿಯಾರ್... ಹೀಗೆ ವಿಚಾರಗಳನ್ನು ತಿಳಿಸಿಕೊಡಬೇಕು. ಪರ್ಯಾಯ ಪೂಜೆ- ಪುನಸ್ಕಾರ, ಆಚರಣೆ-ನಂಬಿಕೆಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ದೌರ್ಜನ್ಯ ಕೋರರು ಯಾವುದನ್ನು ಪೂಜಿಸುತ್ತಾರೊ ಅದನ್ನು ತಮ್ಮ ಮಕ್ಕಳು ಪೂಜಿಸದ ಹಾಗೆ ನೋಡಿಕೊಳ್ಳಬೇಕು. ಅಂತಹ ಸ್ಥಳಗಳಿಗೆ ತಮ್ಮ ಮಕ್ಕಳು ಹೋಗದ ಹಾಗೆ ನೋಡಿಕೊಳ್ಳಬೇಕು, ತಾವು ಕೂಡ ಹೋಗಬಾರದು. ಆಗ ಮಕ್ಕಳಲ್ಲಿ ಹೊಸ ವಾತಾವರಣ ಮೂಡುತ್ತದೆ. ದೌರ್ಜನ್ಯ ಎಂಬುದೇನು ಎಂಬುದೇ ಅವರಿಗೆ ಗಮನಕ್ಕೆ ಬರುವುದಿಲ್ಲ. ಅದರ ಸೋಂಕು ಕೂಡ ಅವರಿಗೆ ತಗುಲುವುದಿಲ್ಲ. ಅಕಸ್ಮಾತ್ ಮುಂದೆ ಅವರ ಬದುಕಿನಲ್ಲಿ ಅಸ್ಪೃಶ್ಯತೆ ಬಂದರೆ ಈಗಾಗಲೇ ಅವರು ಆತ್ಮವಿಶ್ವಾಸವನ್ನು ಬೇರೆ ಮಾರ್ಗಗಳಲ್ಲಿ ಬುದ್ಧರ ಮಾರ್ಗಗಳಲ್ಲಿ ಅಂಬೇಡ್ಕರ್ ಚಿಂತನೆಗಳಲ್ಲಿ ಕಂಡು ಕೊಂಡಿರುವುದರಿಂದ ಖಂಡಿತ ಅವರು ಅದನ್ನು ಸಮರ್ಥವಾಗಿ ಎದುರಿಸುತ್ತಾರೆ.

ದಲಿತ ಸಮುದಾಯಗಳ ಪೋಷಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು‌. ಅವರು ತಮ್ಮ ಮಕ್ಕಳಿಗೆ ವರ್ಷಕ್ಕೊಮ್ಮೆ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡದಿದ್ದರೂ ಪರವಾಗಿಲ್ಲ ಅಸ್ಪೃಶ್ಯತೆಯ ವಾತಾವರಣದಿಂದ ಅವರನ್ನು ಮುಕ್ತಗೊಳಿಸುತ್ತಿರಬೇಕು. ಅದರ ನೆರಳು ಕೂಡ ಅವರಿಗೆ ತಗುಲದ  ನೋಡಿಕೊಳ್ಳಬೇಕು. ವಿಶೇಷವಾಗಿ ಉತ್ತಮ ಇಂಗ್ಲಿಷ್ ಶಿಕ್ಷಣ, ಯಾವ ಶಾಲೆಯಲ್ಲಿ ಅಸ್ಪೃಶ್ಯತೆಯ ವಾತಾವರಣ ಇಲ್ಲವೋ ಅಂತಹ ಶಾಲೆಯಲ್ಲಿ ಶಿಕ್ಷಣ ಹೀಗೆ ಕೊಡಿಸಬೇಕು. ಅಂಬೇಡ್ಕರ್, ಬುದ್ಧ, ಪುಲೆ, ಪೆರಿಯಾರ್, ಬಸವಣ್ಣ ಪುಸ್ತಕಗಳನ್ನು ವಿಚಾರಗಳನ್ನು ಬಾಲ್ಯದಲ್ಲಿಯೇ ಓದಿಸಬೇಕು. ಜೊತೆಗೆ ದೌರ್ಜನ್ಯಕೋರರ ಚಿಂತನೆಗಳನ್ನು ಪುಸ್ತಕಗಳನ್ನು ಓದದಂತೆ ಎಚ್ಚರಿಕೆ ವಹಿಸಬೇಕು. ಆಗ ಖಂಡಿತ ಅಂತಹ ಸಂದರ್ಭದಲ್ಲಿ ದಲಿತ ಸಮುದಾಯಗಳ ಮಕ್ಕಳು ತಮ್ಮದೇ ಆತ್ಮವಿಶ್ವಾಸದಿಂದ, ಸ್ವಂತ ಚಿಂತನೆಗಳಿಂದ ಬೆಳೆಯುತ್ತಾರೆ. ಅಸ್ಪೃಶ್ಯತೆಯ ವಾತಾವರಣದಿಂದ ದೂರ ಇರುತ್ತಾರೆ, ದೂರ ಸಾಗುತ್ತಾರೆ. 

***

Comments

Popular posts from this blog

ಪುಲಕೇಶಿ ಹೊಲೆಯರವನೆ? ಚಾಲುಕ್ಯರು ಛಲವಾದಿಗಳೇ? -ರಘೋತ್ತಮ ಹೊ.ಬ

"ಹೊಲಯರು - ಮಾದರು -ರಾಜರು" ಎಂಬ ತಮ್ಮ ಸಂಶೋಧನಾ ಕೃತಿಯಲ್ಲಿ ಸಂಶೋಧಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆದ ಶ್ರೀ ಎಂ.ನಂಜುಂಡಸ್ವಾಮಿ ಐಪಿಎಸ್ ರವರು ಹೊಲೆಯರು ಮತ್ತು ಮಾದಿಗರು ಈ ಎರಡೂ ಜನಾಂಗಗಳು ಕರ್ನಾಟಕ ರಾಜ್ಯದಲ್ಲಿ ರಾಜರಾಗಿದ್ದವರು ರಾಜ್ಯ ಆಳಿದವರು ಎಂದು ಸಂಶೋಧನೆ ಮೂಲಕ ಸಾಧಿಸಿದ್ದಾರೆ. ಅದರಲ್ಲಿ ಬಹು ಮುಖ್ಯವಾದದ್ದು ಬಾದಾಮಿಯ ಚಾಲುಕ್ಯರು ಹೊಲೆಯ ವಂಶಸ್ಥರು ಮತ್ತು ಛಲವಾದಿ ಜನಾಂಗದವರು ಎಂದು ಲೇಖಕರು ತಮ್ಮ ಭಾಷಾಶಾಸ್ತ್ರದ ಸಂಶೋಧನೆಯ ಆಧಾರದಲ್ಲಿ ಹೇಳುತ್ತಾರೆ. "ಹೊಲಯರು - ಮಾದರು -ರಾಜರು" ಆ ಕೃತಿಯಲ್ಲಿ ಪುಟ ಸಂಖ್ಯೆ 96ರಲ್ಲಿ  ನಂಜುಂಡಸ್ವಾಮಿಯವರು ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಬೇಲೂರು ಚನ್ನಕೇಶವ ದೇವಾಲಯಗಳಲ್ಲಿ ಹೊಲೆಯನಿಗೆ ನೀಡುವ ಗೌರವ ಉಲ್ಲೇಖಿಸುತ್ತ "ಆ ಗೌರವ ರಾಜನಿಗೆ ನೀಡುವ ಗೌರವದಂತಿದೆ. ಹೊಲೆಯ ರಾಜನಿಂದಲೇ ಆ ದೇವಾಲಯ ನಿರ್ಮಾಣವಾಗಿರುವುದರ ಸಂಕೇತವಾಗಿ ಆತನಿಗೆ ಈಗಲೂ ಆ ಗೌರವ ಸಿಗುತ್ತಿದೆ" ಎಂದು ಹೇಳುತ್ತಾರೆ. ಇನ್ನೂ ಬಾಗಲಕೋಟೆಯ ದೇಸಾಯಿಗಳು ಈಗಲೂ ಹೊಲೆಯರ ಮನೆಯಿಂದ ಬೆಂಕಿ ತರುವ ಸಂಪ್ರದಾಯವನ್ನು ಸಹ ಲೇಖಕರು ಉಲ್ಲೇಖಿಸುತ್ತಾರೆ. ಆ  ಹಿನ್ನೆಲೆಯಲ್ಲಿ "ಹಿಂದೆ ನಾವು ಈ ನಾಡನ್ನು ಆಳಿದ ರಾಜರು. ಅದಕ್ಕಾಗಿ ನಮ್ಮ ಬಳಿ ಸಾಂಕೇತಿಕವಾಗಿ ಈಗಲೂ ಬಂದು ದೇಸಾಯಿಗಳು ಬೆಂಕಿ ಪಡೆದುಕೊಳ್ಳುತ್ತಿದ್ದಾರೆ. ಈಗ ನಮ್ಮನ್ನು ಛಲವಾದಿಗಳು ಎನ್ನುವರು. ಹಿಂದೆ ನ...

ಕೆ ಆರ್ ಎಸ್.ನಿರ್ಮಾಣ: ವಾಸ್ತವ ಇತಿಹಾಸ

        - ರಘೋತ್ತಮ ಹೊಬ  ಅದು 1902 ನೇ ಇಸವಿ. ಏಷ್ಯಾದಲ್ಲೆ ಪ್ರಪ್ರಥಮ ಜಲವಿದ್ಯುತ್ ಉತ್ಪಾದನಾ  ಕೇಂದ್ರ ಸ್ಥಾಪನೆಯಾದ ವರ್ಷ. ಅಂದಹಾಗೆ ಅದನ್ನು ಸ್ಥಾಪಿಸಿದವರು ಮೈಸೂರಿನ ಅಂದಿನ ಮಹಾರಾಜ #ನಾಲ್ವಡಿ_ಕೃಷ್ಣರಾಜಒಡೆಯರ್‍ರವರು. ಬ್ರಿಟಿಷರೊಂದಿಗೆ  ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದ ಅವರು ಆ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಶಿವನಸಮುದ್ರ ಎಂಬಲ್ಲಿ ಪ್ರಪ್ರಥಮ ಜಲವಿದ್ಯುತ್ ಕೇಂದ್ರ ಸ್ಥಾಪಿಸಿದರು ಮತ್ತು ಆ ಕಾಲದಲ್ಲೆ 30,000 ವೋಲ್ಟ್  ವಿದ್ಯುತ್‍ಅನ್ನು ಕೋಲಾರದ ಚಿನ್ನದÀ ಗಣಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ಒಂದು ಮಾತು ಅದೇನೆಂದರೆ ಆಗಿನ್ನು ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಪ್ರವೇಶ ಪಡೆದೇ ಇರಲಿಲ್ಲ!    ಇರಲಿ, ಜಲವಿದ್ಯುತ್ ಕೇಂದ್ರವನ್ನೇನೋ ಒಡೆಯರ್‍ರವರು ಸ್ಥಾಪಿಸಿದರು. ಆದರೆ ವಿದ್ಯುತ್ ಉತ್ಪಾದನೆಗೆ ನೀರು ವರ್ಷಾಕಾಲ ದೊರೆಯುತ್ತದೆಯೇ? ಖಂಡಿತ ಇಲ್ಲ. ಮಳೆ ಬಂದಾಗ ವಿದ್ಯುತ್. ಇಲ್ಲದಿದ್ರೆ ನೋ ವಿದ್ಯುತ್! ಬೇಸಿಗೆ ಕಾಲದಲ್ಲಂತೂ ಒಂದು ವೋಲ್ಟ್ ಉತ್ಪತ್ತಿ ಕೂಡ ಕಷ್ಟವಾಗಿತ್ತು. ಇದರಿಂದ ಚಿನ್ನದ ಗಣಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ ಒಡೆಯರ್‍ರಿಗೆ  ಅದರ ಪೂರೈಕೆ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಅಂದರೆ ವಿದ್ಯುತ್ ಉತ್ಪಾದನ ಕೇಂದ್ರಕ್ಕೆ ನ...

ಮುಚ್ಚಿಡಲ್ಪಟ್ಟ ಅಂಬೇಡ್ಕರ್ ರ ಭವ್ಯ ಇತಿಹಾಸ -ರಘೋತ್ತಮ ಹೊ.ಬ

  ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲಿ ಹುಟ್ಟಿದರು ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ತಮ್ಮ ತಂದೆಯನ್ನು ನೋಡಲು ಗಾಡಿಯಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು. ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ' ಎನಿಸಿಕೊಂಡರು. ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ. ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಅಂಬೇಡ್ಕರ್ ಎಂಬ"ಮಹಾನ್ ಇತಿಹಾಸವನ್ನು" ಮುಚ್ಚಲಾಗುತ್ತಿದೆ!       ಹಾಗಿದ್ದರೆ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ   ಜಾರ್ಜ್ ಬುಷ್ "ಗಾಂಧಿ, ಠಾಗೋರ್ ಮತ್ತು ನೆಹರೂ"ರವರುಗಳನ್ನು ನವಭಾರತದ ನಿರ್ಮಾತೃಗಳೆನ್ನುತ್ತಾರೆ. ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ ರಂತಹವರು ಇದಕ್ಕಿಂತ ಹೆಚ್ಚ...